
ಈ ದೇಶದಲ್ಲಿ ಸರ್ಕಾರಿ ಶಾಲೆಗಳ ಕೊಡುಗೆ ಅಪಾರವಾದುದು, ಮಕ್ಕಳಿಗೆ ಸ್ವತಂತ್ರ ಆಲೋಚನಾ ಶಕ್ತಿಯನ್ನು ತುಂಬುವುದೇ ನಿಜವಾದ ಶಿಕ್ಷಣ ಮಕ್ಕಳ ಸಾಮರ್ಥ್ಯಶಕ್ತಿಯನ್ನು ಗುರುತಿಸಿ, ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡಿ, ಸಮಾಜಕ್ಕೆ ಪೂರಕವಾಗಿ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಪೋಷಕರಿಗೆ ಇದೆ. ಜತೆಗೆ ಮಕ್ಕಳನ್ನು ತಿದ್ದಿ-ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಶಿಕ್ಷಕರಿಗೆ ಇದೆ. ಈ ರೀತಿ ರೂಪುಗೊಂಡ ಮಕ್ಕಳೇ ದೇಶದ ಭವಿಷ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡುವ ಸರಕಾರ ನಮ್ಮದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.


ಅವರು ಕುಂಬಳಚೇರಿ ಸರಕಾರಿ ಹಿ.ಪ್ರಾ.ಶಾಲಾ ಅಮೃತಮಹೋತ್ಸವ ಸಮಿತಿ ವತಿಯಿಂದ ಜ.27 ರಂದು ನಡೆದ ಪೆರಾಜೆ ಕುಂಬಳಚೇರಿ ಸರಕಾರಿ ಹಿ.ಪ್ರಾ.ಶಾಲಾ ಅಮೃತಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಅಮೃತಮಹೋತ್ಸವ ಸಮಿತಿ ಅಧ್ಯಕ್ಷೆ ಪ್ರಮೀಳ ಭಾರಧ್ವಾಜ್ ಬಂಗಾರಕೋಡಿ, ಮಾಜಿ ಶಾಸಕ ಕೆ.ಜಿ.ಬೋಪಯ್ಯ, , ಕೊಡಗು ಆಡಳಿತ ಮತ್ತು ಅಭಿವೃದ್ಧಿ ಉಪನಿರ್ದೇಶಕ ಚಂದ್ರಕಾಂತ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ, ಪೆರಾಜೆ ಶ್ರೀಶಾಸ್ತಾವು ದೇವಳದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಪೆರಾಜೆ ಗ್ರಾ.ಪಂ.ಸದಸ್ಯ ಹಾಗೂ ಅಮೃತ ಮಹೋತ್ಸವ ಸಮಿತಿ ಗೌರವ ಸಲಹೆಗಾರ ಸುರೇಶ್ ಪೆರುಮುಂಡ,ಪೆರಾಜೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಅಮೃಮಹೋತ್ಸವ ಗೌರವಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಭಾಗವಹಿಸಿ ಶುಭಹಾರೈಸಿದರು.ಮುಖ್ಯ ಭಾಷಣಗಾರರಾಗಿ ವೆಂಕಟರಮಣ ರಾವ್ ಮಂಕುಡೆ ಭಾಗವಹಿಸಿ , ಮಕ್ಕಳಿಗೆ ಬಾಲ್ಯದಲ್ಲಿಯೆ ಸಂಸ್ಕಾರಯುತ ಜೀವನ ಪಾಠ ಹೇಳಿಕೊಟ್ಟಲ್ಲಿ ಅವರು ಮುಂದೆ ಸಮಾಜದಲ್ಲಿ ಅಗ್ರಗಣ್ಯರಾಗಲು ಸಾಧ್ಯವಾಗಬಹುದು ಎಂದು ಹೇಳಿದರು
ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಪ್ರವೀಣ್ ಮಜಿಕೋಡಿ, ಪೂರ್ಣಿಮ ಕುಂಡಾಡು ಇದ್ದರು. . ಎಸ್.ಡಿ.ಎಂ.ಸಿ, ಅಮೃತಮಹೋತ್ಸವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕ ವೃಂದ ವೇದಿಕೆಯಲ್ಲಿ ಇದ್ದರು.ಮನೋಜ್ ನಿಡ್ಯಮಲೆ,ಶ್ರೀನಾಥ್, ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.


