
ಬಂಟ್ವಾಳ : ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಹೊತ್ತು ಕಳ್ಳತನ ನಡೆಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ನಗರ ಪೊಲೀಸರು ಬಂದಿತರಿಂದ ಒಟ್ಟು 15.56 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಆರೋಪಿಗಳಾದ ಮಂಗಳೂರು ತಾಲೂಕು ಬೆಂಗ್ರೆ ಕಸಬಾ ನಿವಾಸಿ ಪರಾಜ್ (27) ಹಾಗೂ ಮಂಗಳೂರು ತಾಲೂಕು ಚೊಕ್ಕಬೆಟ್ಟು – ಕೃಷ್ಣಾಪುರ ನಿವಾಸಿ ತೌಸಿಫ್ (34) ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಜ.9ರಂದು ಸಜಿಪ ಮುನ್ನೂರು ಗ್ರಾಮದ ಮೈಕೆಲ್ ಡಿಸೋಜಾ ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ದುಷ್ಕರ್ಮಿಗಳು ಸುಮಾರು 5.36 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣದ ಆರೋಪಿಗಳಿಂದ ಒಟ್ಟು ರೂ. 12,23,000 ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 15,56,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ