
ಬಂಟ್ವಾಳ: ಉತ್ತರಭಾರತ ಯಾತ್ರೆಗೆ ತೆರಳಿರುವ ದ.ಕ.ಜಿಲ್ಲೆಯ 92 ಮಂದಿ ಯಾತ್ರಾರ್ಥಿಗಳು ನೆರೆಯ ನಡುವೆ ಗುಜರಾತ್ ನಲ್ಲಿ ಕಳೆದ 24 ಗಂಟೆಗಳಿಂದ ಬಾಕಿಯಾಗಿದ್ದಾರೆ.

ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಯ ಕಾರಣ ಗುಜರಾತ್ ರಾಜ್ಯದ ಕೆಲವು ಭಾಗಗಳಲ್ಲಿ ನೆರೆಯಿಂದ ಮುಳುಗಡೆ ಆಗಿವೆ , ರಸ್ತೆಗಳು ಬಂದ್ ಆಗಿವೆ ಎಂದು ಹೇಳಲಾಗಿದೆ.
ಗುಜರಾತ್ ಸೋಮನಾಥೇಶ್ವರ ದೇವಾಲಯಕ್ಕೆ ಬೇಟಿ ನೀಡಿ ವಾಪಸು ಆಗುವ ವೇಳೆ ರಸ್ತೆಯಲ್ಲಿ ನೀರು ತುಂಬಿದ ಕಾರಣ ಯಾತ್ರಾರ್ಥಿಗಳು ಅಲ್ಲಿಯೇ ಒಂದು ದಿನದಿಂದ ಬಾಕಿಯಾಗಿದ್ದಾರೆ.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಜಯಕುಮಾರ್ ಅವರ ನೇತ್ರತ್ವದಲ್ಲಿ ತೆರಳಿದ 92 ಯಾತ್ರಾರ್ಥಿಗಳು ನೆರೆಯ ನಡುವೆ ಬಾಕಿಯಾಗಿದ್ದಾರೆ.
ಕಳೆದ 20 ವರ್ಷಗಳಿಂದ ಸತತವಾಗಿ ಜಯಕುಮಾರ್ ಅವರ ನೇತ್ರತ್ವದಲ್ಲಿ ಅಮರನಾಥ ಯಾತ್ರೆ ನಡೆಯುತ್ತಿದ್ದು,ಈ ಬಾರಿಯೂ ಅದೇ ಮಾದರಿಯಲ್ಲಿ ಯಾತ್ರೆ ಕೈಗೊಂಡಿದ್ದಾರೆ.
ದ.ಕ.ಜಿಲ್ಲೆಯ ಯಾತ್ರಾರ್ಥಿಗಳ ಜೊತೆ ಕ್ಯಾಲಿಕಟ್ ತಮಿಳುನಾಡಿನ ಮೂರು ಮಂದಿ ಯಾತ್ರಾರ್ಥಿಗಳು ಆಗಮಿಸಿದ್ದಾರೆ.
ದ.ಕ.ಜಿಲ್ಲೆಯಿಂದ ಗುಜರಾತ್ ನ ಧ್ವಾರಕ ದೇವಾಲಯಕ್ಕೆ ಬೇಟಿ ನೀಡಿ ಬಳಿಕ ಅಲ್ಲಿಂದ ಜುಲೈ 18 ರಂದು ಗುಜರಾತ್ ರಾಜ್ಯದ ಸೋಮನಾಥ ದೇವಸ್ಥಾನಕ್ಕೆ ಬೇಟಿ ನೀಡಿದ್ದರು. ಯಾತ್ರಾರ್ಥಿಗಳು ಅಲ್ಲಿಂದ ದೇವರ ದರ್ಶನ ಪಡೆದು ವಾಪಸು ಆಗುವ ವೇಳೆ ನೆರೆಯ ಕಾರಣದಿಂದ ರಸ್ತೆ ಬಂದ್ ಆಗಿದೆ. ಅಲ್ಲಿಯೇ ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಸದ್ಯ ತಂಗಿದ್ದು,ಯಾವುದೇ ಸಮಸ್ಯೆಗಳಿಲ್ಲದೆ ಸೇಫ್ ಆಗಿದ್ದೇವೆ ಎಂದು ದೂರವಾಣಿ ಮೂಲಕ ಮಾಧ್ಯಮಕ್ಕೆ ತಿಳಿಸಿದ್ದಾರೆ.
