ದುಬೈ 24 ಎಚ್ 2025’ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುವ ತಮಿಳು ನಟ ಅಜಿತ್ ಕುಮಾರ್ ಮತ್ತು ಅವರ ತಂಡಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಭಿನಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, ‘ದುಬೈ 24ಎಚ್ 2025’ ರೇಸ್ನ 991 ವಿಭಾಗದಲ್ಲಿ ಅಜಿತ್ ಕುಮಾರ್ ಮತ್ತು ಅವರ ತಂಡವು ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಕೇಳಿ ನಾನು ರೋಮಾಂಚಿತನಾಗಿದ್ದೇನೆ. ಈ ಗಮನಾರ್ಹ ಸಾಧನೆಗಾಗಿ ಅಜಿತ್ ಕುಮಾರ್ ಮತ್ತು ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ದುಬೈ 24ಎಚ್ 2025 ರೇಸಿಂಗ್ ಸ್ಪರ್ಧೆಯ 991 ವಿಭಾಗದಲ್ಲಿ ನಟ ಅಜಿತ್ ಕುಮಾರ್ ಅವರು ಮೂರನೇ ಸ್ಥಾನ ಮತ್ತು ಜಿಟಿ4 ವಿಭಾಗದಲ್ಲಿ ‘ಸ್ಪಿರಿಟ್ ಆಫ್ ದಿ ರೇಸ್’ ಗಳಿಸಿರುವುದು ಭಾರತಕ್ಕೆ ಹಮ್ಮೆಯ ಕ್ಷಣ. ಅಜಿತ್ ಕುಮಾರ್ ಅವರ ಸಾಧನೆ ಗಮನಾರ್ಹ. ಅವರ ಉತ್ಸಾಹ ಮತ್ತು ಸಮರ್ಪಣಾ ಮನೋಭಾವ ಅಸಂಖ್ಯಾತ ಜನರಿಗೆ ಪ್ರೇರಣೆ‘ ಎಂದು ಕೆ.ಅಣ್ಣಾಮಲೈ ಅಭಿನಂದಿಸಿದ್ದಾರೆ. ನಟ -ರಾಜಕಾರಣಿ ಕಮಲ್ ಹಾಸನ್, ಅಜಿತ್ ಅವರ ಈ ಗೆಲುವು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ್ದಾರೆ.