
ಮಂಗಳೂರು: ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶುಕ್ರವಾರ (ಜ.10) ಮಂಗಳೂರಿನಲ್ಲಿದ್ದ ಬಾಂಗ್ಲಾದೇಶ ಪ್ರಜೆಯನ್ನು ಬಂಧಿಸಲಾಗಿದೆ.

ಮಂಗಳೂರು ಹೊರವಲಯದ ಮುಕ್ಕ ಎಂಬಲ್ಲಿ ದಾಳಿನಡೆಸಿದ ಅಧಿಕಾರಿಗಳು ಮೂರು ವರ್ಷಗಳಿಂದ ಭಾರತದಲ್ಲಿ ತಲೆ ಮರೆಸಿಕೊಂಡಿದ್ದ ಬಾಂಗ್ಲಾದೇಶಿ ಅನರುಲ್ ಶೇಖ್ (25) ಎಂಬಾತನ್ನು ಬಂಧಿಸಿದ್ದಾರೆ.ಮುಕ್ಕದಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಅನರುಲ್ ಶೇಖ್ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯವನು.
ಮೂರು ವರ್ಷಗಳ ಹಿಂದೆ ಇಂಡೋ- ಬಾಂಗ್ಲಾ ಅಂತಾರಾಷ್ಟ್ರೀಯ ಗಡಿರೇಖೆ ಲಾಲ್ ಗೋಲ್ ಮೂಲಕ ಒಳ ನುಸುಳಿದ್ದ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ಬಂದಿದ್ದ ಅನರುಲ್ ಶೇಖ್ ಮೊದಲು ಉಡುಪಿಗೆ ಬಂದು ನೆಲೆಸಿದ್ದ ಎಂದು ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸ್ ಹಾಗು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅನರುಲ್ ಶೇಖ್ ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
