ನವದೆಹಲಿ: ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ್ ಅವರು ನಿನ್ನೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮಾವ್ಲವಿ ಅಮೀರ್ ಖಾನ್ ಮುತ್ತಾಕಿ ಅವರೊಂದಿಗೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಿದರು. ಈ ಸಂಯುಕ್ತ ಪ್ರಕಟಣೆಯಲ್ಲಿ ಎರಡೂ ದೇಶಗಳು ಏಪ್ರಿಲ್ 22ರಂದು ಪಹಾಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸಿ, ಪ್ರದೇಶದ ದೇಶಗಳಿಂದ ಉಗಮಿಸುವ ಭಯೋತ್ಪಾದನೆಯ ಎಲ್ಲ ಕೃತ್ಯಗಳನ್ನೂ ಏಕಸ್ವರದಲ್ಲಿ ಖಂಡಿಸಿದವು.

ಎರಡೂ ದೇಶಗಳು ಪರಸ್ಪರದ ಪ್ರಭುತ್ವ ಮತ್ತು ಭೌಗೋಳಿಕ ಅಖಂಡತೆಯ ಗೌರವದ ಮಹತ್ವವನ್ನು ಒತ್ತಿ ಹೇಳಿದರು. ಭಾರತ ತನ್ನ ಭದ್ರತಾ ಚಿಂತನೆಗಳ ಕುರಿತು ಅಫ್ಘಾನಿಸ್ತಾನದ ಸಹಾನುಭೂತಿಯನ್ನು ಮೆಚ್ಚಿಕೊಂಡಿತು. ಅಫ್ಘಾನ್ ವಿದೇಶಾಂಗ ಸಚಿವರು ಅಫ್ಘಾನಿಸ್ತಾನದ ಭೂಮಿಯನ್ನು ಭಾರತದ ವಿರುದ್ಧ ಯಾವುದೇ ಉಗ್ರ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಡಾ. ಜಯಶಂಕರ್, ಅಫ್ಘಾನಿಸ್ತಾನದಲ್ಲಿ ವಿಪತ್ತಿನ ಸಂದರ್ಭದಲ್ಲಿ ಭಾರತ ನೀಡಿದ ತ್ವರಿತ ಸಹಾಯವನ್ನು ಅಫ್ಘಾನ್ ವಿದೇಶಾಂಗ ಸಚಿವರು ಮೆಚ್ಚಿದರು.
ಮಾತುಕತೆಯ ವೇಳೆ ಭಾರತ ನೀಡುತ್ತಿರುವ ಮಾನವೀಯ ಸಹಾಯ ಕಾರ್ಯಕ್ರಮಗಳ ಪ್ರಗತಿಯನ್ನು ಪರಾಮರ್ಶಿಸಲಾಯಿತು. ಇದರಲ್ಲಿ ಆಹ್ಯ ಧಾನ್ಯ, ಸಾಮಾಜಿಕ ನೆರವು ಸಾಮಗ್ರಿಗಳು, ಶಾಲಾ ಸಾಮಗ್ರಿಗಳು, ವಿಪತ್ತು ಪರಿಹಾರ ವಸ್ತುಗಳು ಹಾಗೂ ಕೀಟನಾಶಕಗಳ ಪೂರೈಕೆ ಒಳಗೊಂಡಿದೆ. ಭಾರತ ಮುಂದುವರೆಯುವ ಸಹಾಯದ ಬದ್ಧತೆಯನ್ನು ಪುನರುಚ್ಚರಿಸಿತು. ಅಫ್ಘಾನ್ ಸರ್ಕಾರ ಬಲವಂತವಾಗಿ ವಾಪಸು ಕಳುಹಿಸಲಾದ ಶರಣಾರ್ಥಿಗಳಿಗೆ ಭಾರತ ನೀಡಿದ ಮಾನವೀಯ ಸಹಾಯಕ್ಕೆ ಧನ್ಯವಾದ ತಿಳಿಸಿತು.
ಇದೆ ವೇಳೆ, ಕ್ರೀಡೆ, ವಿಶೇಷವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಿತು. ಎರಡೂ ರಾಷ್ಟ್ರಗಳು ಭಾರತ–ಅಫ್ಘಾನಿಸ್ತಾನ ವಾಯು ಸರಕು ಮಾರ್ಗದ ಆರಂಭವನ್ನು ಸ್ವಾಗತಿಸಿವೆ. ಇದು ನೇರ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ. ಅಫ್ಘಾನ್ ಪಕ್ಷವು ಭಾರತೀಯ ಕಂಪನಿಗಳನ್ನು ಅಫ್ಘಾನಿಸ್ತಾನದ ಗಣಿಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿತು.
ಈ ಮಾತುಕತೆ ಎರಡೂ ರಾಷ್ಟ್ರಗಳ ನಡುವೆ ಶಾಂತಿ, ಸ್ಥಿರತೆ ಮತ್ತು ಪರಸ್ಪರ ವಿಶ್ವಾಸವನ್ನು ಬಲಪಡಿಸುವ ಹೊಸ ಹಾದಿ ತೆರೆಯಲಿದೆ ಎಂದು ನಾಯಕರಿಬ್ಬರೂ ವಿಶ್ವಾಸ ವ್ಯಕ್ತಪಡಿಸಿದರು.

