ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ

ಸುಳ್ಯ ಭಾಗದಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ – ಗ್ರಾಮಸ್ಥರು, ಕೃಷಿಕರಿಂದ ಎ.ಸಿ.ಎಫ್ ಗೆ ಮನವಿ

ಸುಳ್ಯ ತಾಲೂಕಿನ ಅರಂಬೂರು ಹಾಗೂ ಪರಿವಾರಕಾನ ಭಾಗದಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ರೈತ ಸಮುದಾಯ ಸುಳ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಮನವಿಯ ಹಿನ್ನೆಲೆ:
ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ, ಅರಂಬೂರು, ಪರಿವಾರಕಾನ ಹಾಗೂ ಅದಕ್ಕೆ ಹೊಂದಿಕೊಂಡ ಹಲವೆಡೆಗಳಲ್ಲಿ ಕಳೆದ ಕೆಲ ತಿಂಗಳಿನಿಂದ ಕಾಡಾನೆಗಳು ಬೆಳೆದ ಬೆಳೆಗಳಿಗೆ ಹಾನಿ ಮಾಡುತ್ತಿವೆ. ಈ ಆನೆಗಳು ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ವಿಶೇಷವಾಗಿ ರೈತರು ಬೆಳೆದ ಬಾಳೆ, ತೆಂಗು, ಅಡಿಕೆ, ಭತ್ತದ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ.

ಈ ಭಾಗದಲ್ಲಿ ಸುಮಾರು 220ಕ್ಕಿಂತಲೂ ಅಧಿಕ ಮನೆಗಳು ಹಾಗೂ ಸುಮಾರು 400ಎಕರೆ ಪ್ರದೇಶಗಳಲ್ಲಿ ಬಾಳೆ, ತೆಂಗು, ಭತ್ತ, ಅಡಿಕೆ ಕೃಷಿ ಮಾಡುತ್ತಿದ್ದು, ಇದು ಆನೆ ಹಾವಳಿಯಿಂದ ನಾಶವಾಗಿದೆ. ಅಲ್ಲದೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಭಯ ಪಡುವ ಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದುದರಿಂದ ರಸ್ತೆ ಬದಿಯಲ್ಲಿ ವಿದ್ಯುದೀಪ ಅಳವಡಿಸಬೇಕು ಮತ್ತು ಆನೆ ತಡೆಗೋಡೆಯನ್ನು ಪರಿವಾರಕಾನದಿಂದ ಅರಣ್ಯ ಇಲಾಖೆಯ ಮರದ ಡಿಪೋ ತನಕ, ಪಾಲಡ್ಕದಿಂದ ಕಲ್ಬರ್ಪೆ ತನಕ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.

ಪ್ರಮುಖರಾದ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಅನಿಲ್ ಪರಿವಾರಕಾನ, ಅಶೋಕ್ ಪೀಚೆ, ಸುದೇಶ್ ಅರಂಬೂರು, ರವಿ, ಪುಷ್ಪಾವತಿ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಶಬರೀಶ ಪರಿವಾರಕಾನ ಮತ್ತಿತರರು ಮನವಿ ಸಲ್ಲಿಸಿದರು.

ರಾಜ್ಯ