ಪುತ್ತೂರು, ಮೇ 30 – ನರಿಮೊಗರು ಸಮೀಪದ ರೈಲು ಹಳಿಯಲ್ಲಿ ಭಾರೀ ಮಣ್ಣು ಕುಸಿತ ಸಂಭವಿಸಿರುವ ಕಾರಣ, ಪಡೀಲು ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರ ಸಂಪೂರ್ಣವಾಗಿ ವ್ಯತ್ಯಯಗೊಂಡಿದೆ. ಈ ಮೂಲಕ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಎದುರಿಸಲಿದ್ದಾರೆ.


ಮಣ್ಣು ಕುಸಿತದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ (ರೈಲು ಸಂಖ್ಯೆ 56627) ಅನ್ನು ಕಬಕ ಪುತ್ತೂರಿನಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನು, ಮುರುಡೇಶ್ವರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16586) ಪ್ರಸ್ತುತ ಬಂಟ್ವಾಳ ಕಡೆಗೆ ಚಲಿಸುತ್ತಿರುವುದಾಗಿ ರೈಲ್ವೆ ಮೂಲಗಳು ತಿಳಿಸಿವೆ.ಘಟನೆಯ ನಂತರ ಸ್ಥಳದಲ್ಲಿ ತಕ್ಷಣವೇ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಹಳಿಯನ್ನು ಪುನಃ ಪ್ರಾರಂಭಿಸುವ ಕೆಲಸ ಪ್ರಗತಿಯಲ್ಲಿದೆ.
ರೈಲುಗಳ ನಿಖರ ಮಾಹಿತಿ ತಿಳಿಯಲು NTES (National Train Enquiry System) ವೆಬ್ಸೈಟ್ ಅಥವಾ Where is My Train ಅಪ್ಲಿಕೇಶನ್ ಬಳಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ತುರ್ತು ಸಂದರ್ಭದಲ್ಲಿ 139 ಸಂಖ್ಯೆಗೆ ಕರೆ ಮಾಡಬಹುದು ಅಥವಾ @RailwaySeva ಗೆ ಟ್ವೀಟ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ಈ ಮಾಹಿತಿಯನ್ನು ಪರಿಗಣಿಸಲು ಸೂಚನೆ ನೀಡಲಾಗಿದೆ.