ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇಮಕ: ಮೊದಲ ಬೌದ್ಧ ಸಿಜೆಐ ಹೆಗ್ಗಳಿಕೆಗೆ ಪಾತ್ರರಾದ ಗವಾಯಿ

ನವದೆಹಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ. ಇದರಿಂದ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಅವರು ಮೊದಲ ಬೌದ್ಧ ಸಿಜೆಐ ಆಗಿ ದಾಖಲೆ ಬರೆಯಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಗವಾಯಿಯವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ನ್ಯಾಯಮೂರ್ತಿ ಗವಾಯಿ, ನಿವೃತ್ತರಾದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಂತರ ಸ್ಥಾನಗ್ರಹಣ ಮಾಡಲಿದ್ದಾರೆ. ಭಾರತದ ಸಂವಿಧಾನದ 124(2)ನೇ ವಿಧಿ ಅಡಿಯಲ್ಲಿ ರಾಷ್ಟ್ರಪತಿಗಳು ಈ ನೇಮಕವನ್ನು ಖಚಿತಪಡಿಸಿದ್ದಾರೆ. ಇದರ ಬಳಿಕ ಕಾನೂನು ಮತ್ತು ನ್ಯಾಯ ಇಲಾಖೆ ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು.

ನ್ಯಾಯ ಕ್ಷೇತ್ರದಲ್ಲಿ ಪ್ರಮುಖ ಸಾಧನೆಗಳು

ನ್ಯಾಯಮೂರ್ತಿ ಗವಾಯಿಯವರು, ಪ್ರಸ್ತುತ ಭಾರತೀಯ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದಾರೆ. ಮೇ 24, 2019 ರಂದು ಸರ್ವೋಚ್ಛ ನ್ಯಾಯಾಲಯಕ್ಕೆ ನೇಮಕಗೊಂಡು, ಅವರು ಕಳೆದ ಆರು ವರ್ಷಗಳಲ್ಲಿ ಸುಮಾರು 700 ಬೆಂಚ್ ಗಳಲ್ಲಿ ತೀರ್ಪು ನೀಡಿದ್ದು, ಮುಖ್ಯವಾದ ಕಾನೂನು, ಆಡಳಿತಾತ್ಮಕ, ನಾಗರಿಕ ಮತ್ತು ಕ್ರಿಮಿನಲ್ ಕಾನೂನುಗಳ ವಿಚಾರಣೆಗಳಲ್ಲಿ ಭಾಗವಹಿಸಿದ್ದಾರೆ.

ಅವರು 300 ಕ್ಕೂ ಹೆಚ್ಚು ತೀರ್ಪುಗಳನ್ನು ರಚಿಸಿದ್ದು, ಅಲ್ಲಿ ಹಲವಾರು ಸಂವಿಧಾನಿಕ ಪೀಠದ ತೀರ್ಪುಗಳೂ ಸೇರಿವೆ. ನ್ಯಾಯಮೂರ್ತಿ ಗವಾಯಿ, ಕಾನೂನು ವ್ಯವಸ್ಥೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರುವ ನ್ಯಾಯಾಧೀಶರಾಗಿ ಪರಿಚಿತರಾಗಿದ್ದಾರೆ.

ನ್ಯಾಯಾಂಗ ಸೇವೆಯ ಹಾದಿ

ನ್ಯಾಯಮೂರ್ತಿ ಗವಾಯಿ ಅವರ ನ್ಯಾಯಾಂಗದ ಪ್ರಯಾಣ ಮುಂಬಾಯಿ ಉಚ್ಛ ನ್ಯಾಯಾಲಯದಿಂದ ಪ್ರಾರಂಭವಾಯಿತು. ನವೆಂಬರ್ 12, 2005 ರಂದು ಉಚ್ಛ ನ್ಯಾಯಾಲಯದ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಈ ಅವಧಿಯಲ್ಲಿ, ಮುಂಬಾಯಿ ಸೇರಿದಂತೆ ನಾಗಪುರ, ಔರಂಗಾಬಾದ್ ಮತ್ತು ಪಣಜಿ ಶಾಖಾ ನ್ಯಾಯಾಲಯಗಳಲ್ಲಿ ವಿವಿಧ ಕಚೇರಿಗಳಲ್ಲಿ ಅವರು ಸೇವೆ ಸಲ್ಲಿಸಿದರು.

ಅವರ ಸಮತೋಲಿತ ತೀರ್ಪುಗಳು ಮತ್ತು ನ್ಯಾಯದ ಮೇಲಿನ ನಿಷ್ಠೆ ಅವರನ್ನು ಸರ್ವೋಚ್ಚ ನ್ಯಾಯಾಲಕ್ಕೆ ಕರೆದುಕೊಂಡು ಬಂದಿತು. ಅಲ್ಲಿ ಅವರು ವಾಣಿಜ್ಯ ವಿವಾದಗಳು, ವಸತಿ ಕಾನೂನು, ಪರಿಸರ ಕಾನೂನು ಮತ್ತು ಸಂವಿಧಾನಿಕ ವಿಷಯಗಳ ಕುರಿತು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.

ಭಾರತದ ನ್ಯಾಯಾಂಗದಲ್ಲಿ ಬೌದ್ಧ ಸಮುದಾಯದ ಮೈಲುಗಲ್ಲು

ನ್ಯಾಯಮೂರ್ತಿ ಗವಾಯಿ ಅವರು ಸಿಜೆಐ ಆಗಿ ನೇಮಕಗೊಂಡಿರುವುದು ಬೌದ್ಧ ಸಮುದಾಯದ ಜನರಿಗೆ ಒಂದು ಮಹತ್ತರ ಸಾಧನೆಯಾಗಿದೆ. ಅnd ವರು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಬೌದ್ಧ ನಾಯಕರಾಗಿದ್ದಾರೆ. ಕಾನೂನು ತಜ್ಞರು ಮತ್ತು ನ್ಯಾಯಾಂಗದ ಸದಸ್ಯರು, ಅವರ ಅನುಭವ ಹಾಗೂ ನ್ಯಾಯದ ಮೆಟ್ಟಿಲಿನ ಮೇಲೆ ತೋರಿದ ಬದ್ಧತೆಯನ್ನು ಹೊಗಳುತ್ತಿದ್ದಾರೆ.

ಪ್ರಮಾಣ ವಚನ ಸಮಾರಂಭವು ಇಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಸರ್ವೊಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹಾಗೂ ಇತರೆ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ನ್ಯಾಯಮೂರ್ತಿ ಗವಾಯಿ ಅವರ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವಾ ಅವಧಿ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.

ರಾಷ್ಟ್ರೀಯ