ಮಂಗಳೂರು : ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

ಮಂಗಳೂರು : ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

ಮಂಗಳೂರು: ಹಳೆ ನಾಣ್ಯ ಖರೀದಿಸುವ ಬಗ್ಗೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನಂಬಿ ವ್ಯಕ್ತಿಯೊಬ್ಬರು 58.26 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಡಿ.25ರಂದು ದೂರುದಾರರು ಫೇಸ್‌ಬುಕ್‌ನಲ್ಲಿ ಹಳೆಯ ನಾಣ್ಯ ಖರೀದಿಸಿ ಹೆಚ್ಚಿನ ಹಣನೀಡುವ ಜಾಹೀರಾತನ್ನು ನೋಡಿದ್ದರು. ಅದರಲ್ಲಿದ್ದ ಫೋನ್‌ ನಂಬರ್‌ ಸಂಪರ್ಕಿಸಿ ತಮ್ಮಲ್ಲಿ 15 ಹಳೆಯ ನಾಣ್ಯಗಳಿರುವುದಾಗಿ ತಿಳಿಸಿ ವಾಟ್ಸಾಪ್‌ನಲ್ಲಿ ಫೋಟೊ ಕೂಡ ಕಳಿಸಿದ್ದರು. ವಂಚಕರು ಈ ನಾಣ್ಯ ಖರೀದಿಸುತ್ತೇವೆ, ಅದಕ್ಕೆ 49 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು. ಮೊದಲಿಗೆ ಆರ್‌ಬಿಐ ನೋಂದಣಿಗೆ 750 ರೂ. ಕಳುಹಿಸಲು ಕೇಳಿದ್ದಾರೆ. ದೂರುದಾರರು ಅದನ್ನು ಯುಪಿಐ ಮೂಲಕ ಕಳಿಸಿದ್ದಾರೆ.
ಬಳಿಕ ಜಿಎಸ್‌ಟಿ ಪ್ರೊಸೆಸಿಂಗ್‌ ಶುಲ್ಕ 17,500 ರೂ., ವಿಮಾ ಶುಲ್ಕ 94,500 ರೂ., ಟಿಡಿಎಸ್‌ ಶುಲ್ಕ 49,499 ರೂ., ಐಟಿಆರ್‌ ಶುಲ್ಕ ರೂ.71,500 ರೂ., ಜಿಪಿಎಸ್‌ ಶುಲ್ಕ ರೂ.39,990 ರೂ. ಹಾಗೂ ಆರ್‌ಬಿಐ ನೋಟಿಸ್‌ ಪೆಂಡಿಂಗ್‌ ರೂ.3,50,000 ರೂ. ಪಾವತಿಸುವಂತೆ ಫಿರ್ಯಾದಿದಾರರ ವಾಟ್ಸಾಪ್‌ ನಂಬ್ರಗೆ ಸಂದೇಶ ಕಳಿಸಿರುತ್ತಾರೆ. ಇದನ್ನು ನಂಬಿದ ದೂರುದಾರರು ತಮ್ಮ ವಿವಿಧ ಬ್ಯಾಂಕ್‌ ಖಾತೆಗಳಿಂದ ಹಣ ವರ್ಗಾಯಿಸಿದ್ದಾರೆ. ಬಳಿಕ ದೂರುದಾರರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಮುಂಬಯಿ ಸೈಬರ್‌ ಪೊಲೀಸ್‌ ಕಮಿಷನರ್‌ ಗೌರವ್‌ ಶಿವಾಜಿ ರಾವ್‌ ಶಿಂಧೆ ಎಂದು ಪರಿಚಯಿಸಿಕೊಂಡಿದ್ದು, ಆರ್‌ಬಿಐನವರಿಂದ ನೋಟಿಸ್‌ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ ಎಂದು ಬೆದರಿಸಿ, ಆರ್‌ಬಿಐ ಮಾರ್ಗಸೂಚಿ ಪ್ರಕಾರ 12,55,000 ರೂ. ಪಾವತಿಸುವಂತೆ ತಿಳಿಸಿದ್ದ. ಹೀಗೆ ಹಂತ ಹಂತವಾಗಿ 58,26,399 ರೂ. ವಂಚಿಸಿರುವುದಾಗಿ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯ