

ಕಡಬ: ಕುಮಾರದಾರ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಸಂಭವಿಸಿದೆ.
ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಡಬ ಎಸ್ಐ ಹರೀಶ್ ಸಿಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೆಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ.
ಸ್ಥಳದಲ್ಲಿದ್ದ ಒಂದು 4 ಎಚ್ಪಿ ಮೋಟಾರ್ ಅಳವಡಿಸಿರುವ ಡ್ರೆಜ್ಜಿಂಗ್ ಸಹಿತ ಬೋಟ್, 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು, ಆರು 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು, 14 ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್ ಗಳು, ಕಬ್ಬಿಣದ ಜಾಲರಿ, 2 ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು, ಪ್ಲಾಸ್ಟಿಕ್ ಬುಟ್ಟಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ಕೋರಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ