

ಸುಳ್ಯ: ಸುಳ್ಯದಿಂದ ಜಟ್ಟಿಪಳ್ಳ- ಕೊಡಿಯಾಲಬೈಲು – ದುಗಲಡ್ಕ ರಸ್ತೆ – ಅಭಿವೃದ್ಧಿಗಾಗಿ ಆ ಭಾಗದ ಜನರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದು, ಇದಕ್ಕೆ ಜನಪ್ರತಿನಿದಿಗಳು ಸ್ಪಂದಿಸುತ್ತಿಲ್ಲವೆಂದು ಇಂದು ಬಿಕ್ಷಾಟನೆಯ ರೂಪದಲ್ಲಿ ನಿಧಿ ಸಂಗ್ರಹಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸಾರ್ವಜನಿಕ ನಿಧಿ ಸಂಗ್ರಹಣಾ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಸುಳ್ಯ ಜಟ್ಟಿಪಳ್ಳ ಕ್ರಾಸ್ ನಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿ ಸುಳ್ಯ ನಗರ ಪಂಚಾಯತ್ ಎದುರು ಬಂದು ಜಮಾವಣೆಗೊಂಡಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಭೆಯಲ್ಲಿ ಚಾರ್ಟಡ್ ಅಕೌಂಟೆಂಟ್ ಗಣೇಶ್ ಭಟ್ ಮಾತಾನಾಡಿ “ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆ – ಅತೀ ಅಗತ್ಯ. ಈ ರಸ್ತೆ ಅಭಿವೃದ್ಧಿ ಆಗಬಹುದೆಂದು ಇದುವರೆಗೆ ನಾವು ಕಾಯುತ್ತಿದ್ದೆವು, ಜನಪ್ರತಿನಿಧಿಗಳು ಭರವಸೆ ನೀಡುತ್ತಿದ್ದರು ಆದರೆ ಇಂದು ಅವರ ಭರವಸೆ ಹುಸಿಯಾಗಿದೆ ಎಂದು ಹೇಳಿದರು. ನಮ್ಮ ಶಾಸಕರು ಈ ಬಾರಿ ರಸ್ತೆ ಅಭಿವೃದ್ಧಿ ಮಾಡಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಅವರು ಈ ರಸ್ತೆಯ ಬಗ್ಗೆ ಮುತುವರ್ಜಿ ವಹಿಸಿಲ್ಲ. ಇದೀಗ ಮಂತ್ರಿಯಾದರೂ ಅವರು ನಿರೀಕ್ಷಿತ ಮಟ್ಟದ ಕೆಲಸ ಮಾಡಿಲ್ಲ ಎಂದು ಹೇಳಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುರೇಶ್ ಚಂದ್ರ ಕಮಿಲಡ್ಕ “ಸುಳ್ಯದಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ. ವೆಂಟೆಂಡ್ ಡ್ಯಾಮ್ ಗೆ ಕೋಟಿ ಅನುದಾನ ಬಂದುದು ಬಿಟ್ಟರೆ ಬೇರೆ ಏನಾಗಿದೆ ಇಲ್ಲಿ ಎಂದು ಪ್ರಶ್ನಿಸಿದ ಅವರು ರಸ್ತೆ ಅಭಿವೃದ್ಧಿ ಯಾಗದೆ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ನಮ್ಮ ಈ ಹೋರಾಟ ರಸ್ತೆ ಅಭಿವೃದ್ಧಿ ಕಾಣುವ ತನಕ ಎಂದು ಹೇಳಿದರು. ಸೀತಾನಂದ ಬೇರ್ಪಡ್ಕ ಮಾತನಾಡಿ ರಸ್ತೆ ಅಭಿವೃದ್ಧಿಗೆ ಊರವರು ಪ್ರತಿಭಟನೆ ನಡೆಸುತ್ತಾರೆಂದು ಗೊತ್ತಾದಾಗ ನಿನ್ನೆ ದಿನ ಗುದ್ದಲಿಪೂಜೆ ಮಾಡಿದ್ರು. ನಮಗೆ ಆ ರಸ್ತೆ ಪೂರ್ಣ ಅಭಿವೃದ್ಧಿ ಆಗಬೇಕು. ಸಚಿವರು ಈ ರಸ್ತೆ ಅಭಿವೃದ್ಧಿ ಮಾಡಿಸಬೇಕು” ಎಂದು ಒತ್ತಾಯಿಸಿದರು.

ನ್ಯಾಯವಾದಿ ದಿನೇಶ್ ಮಡಪ್ಪಾಡಿ ಮಾತನಾಡಿ ಸುಳ್ಯ ಕೊಡಿಯಾಲಬೈಲು – ದುಗಲಡ್ಕ ರಸ್ತೆ ಅಭಿವೃದ್ಧಿ ಅತೀ ಅಗತ್ಯ. ಸುಳ್ಯದವರು ಸುಮ್ಮ ಸುಮ್ಮನೆ ಪ್ರತಿಭಟಿಸುವವರಲ್ಲ. ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ನಾವು ಕೇಳಬೇಡವೆ. ಈ ರಸ್ತೆ ಅಭಿವೃದ್ಧಿ ಆಗಬೇಡವೆ. ಈ ರಸ್ತೆ ಅಭಿವೃದ್ಧಿ ಆದರೆನೇ ಪಟ್ಟಣ ಬೆಳೆಯುತ್ತದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಆರೋಗ್ಯವೂ ಹದಗೆಡುತ್ತದೆ. ಅಷ್ಟರ ಮಟ್ಟಿಗೆ ಹದಗೆಟ್ಟಿದೆ. ಈ ರಸ್ತೆ ಅಭಿವೃದ್ಧಿಯ ಹಠ ಆಡಳಿತದವರಿಗೆ ಯಾಕೆ ಬಂದಿಲ್ಲ. ಇಂದಿನ ಈ ಸೌಮ್ಯ ಹೋರಾಟವನ್ನು ಅರ್ಥ ಮಾಡಿಕೊಂಡು ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸುರೇಶ್ ಅಮೈ ಮಾತನಾಡಿ “ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆ ತಿಳಿದುಕೊಂಡು ಜನರ ಬೇಡಿಕೆಗೆ ಸ್ಪಂದಿಸಬೇಕು. ಜನ ಸಮಾನ್ಯರ ಹಕ್ಕನ್ನು ಮೊಟಕುಗೊಳಿಸುವ ಕೆಲಸ ಆಗಬಾರದು” ನಮಗೆ ಸಂಪರ್ಕ ರಸ್ತೆಗಳೇ ಅಲ್ಲಲ್ಲಿ ಮಣ್ಣು ಅಗೆಯುತ್ತಿದ್ದು ಅನಿವಾರ್ಯವಾಗಿ ಆ್ಯಂಬುಲೆನ್ಸ್ ಬರಬೇಕಾದರೆ ಹೆಲಿಕಾಪ್ಟರ್ ಬಳಸಬೇಕಾದ ಅನಿವಾರ್ಯತೆ ಇದೆ ಹಾಗೂ ಈಗ ಅವರಲ್ಲಿ ಪ್ರಶ್ನಿಸಿದರೆ ನಿಮಗೆ ರಸ್ತೆಯು ಬೇಕು ಹೋಗಲು ಸ್ಥಳವು ಬೇಕು ಎಂದರೆ ಹೇಗೆ ಎಂದು ಉದ್ದಟತನದ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. ನಮ್ಮ ಸುಳ್ಯಕ್ಕೆ ರಸ್ತೆಗಳಿಗಿಂತ ಕಾಡಾನೆಗಳೆ ಹೆಚ್ಚು ಬರುತ್ತಿದೆ ಎಂದು ಜನಪ್ರತಿನಿಧಿಗಳನ್ನು ಲೇವಡಿ ಮಾಡಿದರು.

ಬಾಲಕೃಷ್ಣ ನಾಯರ್ ಮಾತನಾಡಿ ನಾವು ಇಲ್ಲಿ ಸೇರಿರುವ 90% ಕೂಡಾ ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಿದವರೇ. ಆಡಳಿತದಲ್ಲಿ ಇರುವವರು ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ನಮ್ಮನ್ನೇ ರಾಜಕೀಯ ಲಾಭ ಪಡೆಯಲು ಹೀಗೆ ಮಾಡುವವರು ಎಂದು ಹೇಳುತ್ತಾರೆ ಹಾಗಾದರೆ ಕಾರ್ಯಕರ್ತರಿಗೆ ಇವರು ಬೆಲೆ ಕೊಡಬೇಕಲ್ಲವೇ. ರಸ್ತೆ ಅಭಿವೃದ್ಧಿ ಹೋರಾಟಕ್ಕಾಗಿ ನಮ್ಮ ಸಭೆ ನಡೆದ ಮರುದಿನವೇ ರೂ.65 ಲಕ್ಷ ಬಂದಿದೆ ಅದು ಎಲ್ಲಿಂದ ಬಂದುದು ಕಿಸೆಯಿಂದ ಬಂತೇ ಎಂದು ಪ್ರಶ್ನಿಸಿದರು. ನೀವು ಗುದ್ದಲಿ ಪೂಜೆಯಲ್ಲಿ ಗಿನ್ನಿಸ್ ದಾಖಲೆ ಮಾಡಿದ ಹಾಗೆ ಇದೆ ನಾವು ಬಿಕ್ಷೆ ಬೇಡಿ ಗಿನ್ನಿಸ್ ಅಲ್ಲಾ ಎಂದು ನಾಯಕರ ವಿರುದ್ದ ಕಿಡಿಕಾರುತ್ತಾ ನಮ್ಮ ಜನಪ್ರತಿನಿಧಿಗಳು ಸರಿ ಇಲ್ಲ. ಸಮಸ್ಯೆಯನ್ನು ಸರಿಯಾಗಿ ತಲುಪಿಸುವ ಕೆಲಸ ಅವರು ಮಾಡುತ್ತಿಲ್ಲ ಎಂದು ಸ್ಥಳೀಯ ಪ್ರತಿನಿಧಿಗಳು ಹಾಗೂ ಮುಖಂಡರ ವಿರುದ್ದ ಕಿಡಿಕಾರಿದರು.

ಸಭೆ ಬಳಿಕ ನ.ಪಂ. ಎದುರು ಪ್ರತಿಭಟನಾಕಾರರು ಇಡಲಾಗಿದ್ದ ನಿಧಿ ಸಂಗ್ರಹಣಾ ಡಬ್ಬಕ್ಕೆ ಹಣ ಹಾಕಿದ್ದು ಇದನ್ನು ರಸ್ತೆಗಾಗಿ ಉಪಯೋಗಿಸುವುದಾಗಿ ತಿಳಿಸಿದರು. ಪ್ರತಿಭಟನಾ ಸಭೆಯಲ್ಲಿ ಡಾ.ರಘುರಾಮ ,ಡಾ.ಗಣೇಶ್ ಶರ್ಮಾ , ಶಂಬಯ್ಯ ಪಾರೆ , ಲೋಹಿತ್ ಮಾಣಿಬೆಟ್ಟು, ಬಾಲಚಂದ್ರ ಅಮೈ ,ದಿನೇಶ್ ಕೊಯಿಕುಳಿ ,ಎಂ.ಪಿ.ಶಿವರಾಮ ಗೌಡ , ಗಿರೀಶ್ ಪಾಲಡ್ಕ ,ನಟರಾಜ್ ಶರ್ಮಾ , ರವಿಚಂದ್ರ ಈಶ್ವರಡ್ಕ ,ಜಗನ್ನಾಥ ನೀರಬಿದಿರೆ ,
ದೀಕ್ಷಿತ್ ಪಾನತ್ತಿಲ ,ಅನಿಲ್ ಪಾನತ್ತಿಲ, ಕುಶ ನೀರಬಿದಿರೆ
ಮೋಹನ ಬೇರ್ಪಡ್ಕ ,ವೆಂಕಟ್ರಮಣ ಬೇರ್ಪಡ್ಕ
ರಾಧಾಕೃಷ್ಣ ಬೇರ್ಪಡ್ಕ, ಖಲಂದರ್, ಶಿಹಾಬ್,ಉದಯ ಮಾಣಿಬೆಟ್ಟು ,ವಸಂತ ಕಾರ್ಗಿಲ್ ಬೇರ್ಪಡ್ಕ ,ಮಧು ಕೊಡಿಯಾಲಬೈಲು ,ಉಬರಡ್ಕ ಗ್ರಾ ಪಂ ಅದ್ಯಕ್ಷೆ ಚಿತ್ರಕುಮಾರಿ ಪಾಲಡ್ಕ ,ಬೇಬಿ ಬೇರ್ಪಡ್ಕ, ,ಹರಿಶ್ಚಂದ್ರ ,ಪ್ರಭಾಕರ ಅಮೈ,ಲತೀಶ್ ರೈ ನೀರಬಿದಿರೆ ಪ್ರವೀಣ್ ರೈ ನೀರಬಿದಿರೆ, ಕೇಶವ ಪಾನತ್ತಿಲ ಸೇರಿದಂತೆ ನೂರಾರು ಮಂದಿ ವಿವಿಧ ಪಕ್ಷದ ಮುಖಂಡರು ಭಾಗವಹಿಸಿದ್ದರು.
