ರಾಜ್ಯ

ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಬೆಳೆ ಮಾರಕ‌|ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ: ಜಾಲತಾಣದಲ್ಲಿ ಭಾರೀ ಟ್ರೋಲ್.

ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅವ್ಯಾಹತವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ ಬೇಕು. ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿವೇಶನದಲ್ಲಿ ಹೇಳಿದ ಮಾತು ಭಾರೀ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದ್ದು ,ಅಡಿಕೆ ಬೆಳೆಗಾರರ ತೀವ್ರ ವಿರೋಧಕ್ಕೆ ಒಳಗಾಗುತ್ತಿದೆ.
ವಿಧಾನ ಸಭೆಯಲ್ಲಿ ರೈತರು, ಅತಿವೃಷ್ಠಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ನಡೆದ ಚರ್ಚೆಯ ಮಧ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಪ್ರತಿ ವರ್ಷ ಲಕ್ಷಾಂತರ ಎಕರೆ ಭೂಮಿ, ಅಡಕೆ ಬೆಳೆ, ವಿಸ್ತಾರವಾಗುತ್ತಿದ್ದು, ಸರಾಸರಿ ಒಂದು ಕೋಟಿ ಅಡಕೆ ಸಸಿಗಳ ಉತ್ಪಾದನೆಯಾಗಿ, ನೀರಾವರಿ ಪ್ರದೇಶದಲ್ಲಿ ಅಡಕೆ ತೋಟ ವಿಸ್ತರಣೆಯಾಗುತ್ತಿದೆ.
ಸಾವಿರಾರು ಕೋಟಿ ರೂಪಾಯಿಗಳನ್ನು ವಿದೇಶದಿಂದ ಹಾಗೂ ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆದು, ಜಲಾಶಯಗಳನ್ನು ಕಟ್ಟಿದ್ದು, ಷರತ್ತುಗಳನ್ನು ಉಲ್ಲಂಘಿಸಿ, ಹಗುರ ಬೆಳೆಗಳ ಬದಲು ಅಡಕೆ ತೋಟಗಳು ಬರುತ್ತಿವೆ, ಇದರಿಂದ ಮುಂದಿನ ದಿನಗಳಲ್ಲಿ, ಸಾಂಪ್ರದಾಯಿಕವಾಗಿ ಅಡಕೆ ಬೆಳೆದು, ಬದುಕನ್ನು ಕಟ್ಟಿಕೊಂಡಿರುವ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು ಸಂಕಷ್ಟಕ್ಕೆ ತುತ್ತಾಗುವ ಭಯ ಆವರಿಸಿದೆ ಎಂದು ಹೇಳಿಕೆ ನೀಡಿದ್ದರು,
ಇದೊಂದು, ಅನಾರೋಗ್ಯಕರ ಬೆಳವಣಿಗೆ ಎಂದ ಸಚಿವರು, ಇಂತಹ ಪ್ರವೃತ್ತಿಗೆ, ಪ್ರೋತ್ಸಾಹ ನೀಡಬಾರದು ಹಾಗೂ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಇದೀಗ ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಸುಳ್ಯ, ಕಡಬ ಭಾಗದಲ್ಲಿ ಅಡಿಕೆ ಬೆಳೆಗಾರರು, ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ಕಂಗಾಲಾಗಿದ್ದು,ರೈತರ ಬದುಕು ದುಸ್ತರ ವಾಗಿದೆ, ಇಂತಹ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ಸ್ವತಹ ಬಿ ಜೆ ಪಿ ಯವರಿಗೂ ಮುಜುಗರವಾಗಿದ್ದು. ರೈತರ ಹಿತ ಕಾಯ್ದುಕೊಳ್ಳಬೇಕಾದ ಸಚಿವರ ನಡೆ ಅಡಿಕೆ ಬೆಳೆಗಾರ ಆಕ್ರೋಶಕ್ಕೆ ಕಾರಣವಾಗಿದಂತು ಸತ್ಯ.

Leave a Response

error: Content is protected !!